ನಮಸ್ತೆ ಪ್ರಿಯ ಓದುಗರೆ, ಪ್ರತಿಯೊಂದು ಊರಿಗೂ ತನ್ನದೇ ಆದ ಇತಿಹಾಸ ಇರುತ್ತೆ. ಕೆಲವೊಂದು ಊರಿಗೆ ಆ ಹೆಸರು ಬರಲು ಆ ಊರಿನಲ್ಲಿ ನೆಲೆಸಿರುವ ಭಗವಂತ ಕೂಡ ಕಾರಣ ಆಗ್ತಾನೆ. ಹೇಗೆ ಹಾಸನಾಂಬೆ ಯು ನೆಲೆನಿಂತ ಕಾರಣ ಹಾಸನ ಆಯ್ತೋ, ಮಂಗಳ ದೇವಿ ನೆಲೆ ನಿಂತಿರುವುದರಿಂದ ಮಂಗಳೂರು ಎಂದು ಹೆಸರು ಬಂತೋ ಹಾಗೆಯೇ ಪರಮೇಶ್ವರನು ಕಡಲ ತಡಿಯಲ್ಲಿ ನೆಲೆಸಿದ ಈ ಊರು ಪರಮೇಶ್ವರನ ಹೆಸರಿನಿಂದ ಕುಂದಾಪುರ ಆಗಿದೆ. ಬನ್ನಿ ಇವತ್ತಿನ ಲೇಖನದಲ್ಲಿ ಬೇಡಿ ಬಂದ ಭಕ್ತರನ್ನು ಅನು ದಿನವೂ ಪೊರೆಯುವ ಕುಂದಾಪುರದ ಕುಂದೇಶ್ವರ ಸ್ವಾಮಿಯ ಪಾದಕ್ಕೆ ಭಕ್ತಿ ಪೂರ್ವಕ ನಮನವನ್ನು ಸಲ್ಲಿಸಿ ಬರೋಣ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾನಿಸೋ ಸಮುದ್ರ ತೀರ, ಇನ್ನೊಂದು ಕಡೆ ಸ್ವಚ್ಛಂದವಾಗಿ ಹರಿಯೋ ಪಂಚ ಗಂಗೊಳ್ಳಿ ನದಿ. ಮತ್ತೊಂದೆಡೆ ಹಚ್ಚ ಹಸುರಿನ ತೆಂಗಿನ ಮರಗಳ ಸಾಲು. ಅಬ್ಬಾ ಇಲ್ಲಿನ ಪ್ರಕೃತಿಯನ್ನು ಆಸ್ವಾದಿಸುತ್ತಾ ಇದ್ರೆ ಒಂದು ಕ್ಷಣ ಬದುಕಿನ ಜಂಜಾಟಗಳ ಮರೆತು ಹೋಗುತ್ತೇವೆ ಎಂದು ಭಾಸ ಆಗುತ್ತೆ. ಇಂತಹ ಪ್ರಕೃತಿಯ ಅನನ್ಯವಾದ ಸೌಂದರ್ಯದ ನಡುವೆ ಪರಮೇಶ್ವರನು ಕುಂದೇಶ್ವರ ಎನ್ನುವ ಹೆಸರಿನಿಂದ ನೆಲೆ ನಿಂತಿದ್ದು, ಈ ಆಲಯವನ್ನು ಕುಂದವರ್ಮ ಎಂಬ ರಾಜನು ನಿರ್ಮಿಸಲಾಗಿದ್ದು ಕುಂದೇಶ್ವರ ನು ನೆಲೆಸಿರುವ ಈ ಊರಿಗೆ ಕುಂದಾಪುರ ಎನ್ನುವ ಹೆಸರು ಬಂತು ಎಂದು ಹಲವಾರು ಶಾಸನ ಹಾಗೂ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಬಲಿ ಪೀಠ, ನದಿ ಮಂಟಪ, ಒಳ ಪೌಳಿ, ಗರ್ಭಗೃಹ, ಪ್ರದಕ್ಷಿಣಾ ಪಥ, ರಾಜ ಗೋಪುರ, ಕಲ್ಯಾಣಿಯನ್ನು ಒಳಗೊಂಡಿರುವ ಈ ದೇವಾಲಯದಲ್ಲಿ ಪರಮೇಶ್ವರನು ಲಿಂಗ ರೂಪದಲ್ಲಿ ನೆಲೆ ನಿಂತಿದ್ದಾನೆ.
ಬೇರೆ ಶಿವನ ದೇವಸ್ಥಾನ ಕ್ಕಿಂತ ಇಲ್ಲಿ ಪ್ರತಿಷ್ಠಾಪಿಸಿರುವ ಶಿವನ ಲಿಂಗವು ತುಂಬಾನೇ ಭಿನ್ನ ಆಗಿದೆ. ಇಲ್ಲಿನ ಶಿವ ಲಿಂಗವನ್ನು ರುದ್ರಾಕ್ಷ ಶಿಲೆಯಿಂದ ಮಾಡಿದ್ದು, ದೇವರ ಶಿರೋ ಭಾಗವು ಅಡ್ಡಕ್ಕೆ ತುಂದರಿಸಲ್ಪಟ್ಟು ಕಂಬದಂತೆ ಚಪ್ಪಟೆ ಆಗಿದೆ. ಪರಮೇಶ್ವರನ ಎದುರಿನಲ್ಲಿ ಇರುವ ಕರಿ ಶಿಲೆಯ ನದಿ ವಿಗ್ರಹವು ಚಿಕ್ಕದಾಗಿದ್ದು ಅತ್ಯಂತ ಸುಂದರವಾಗಿದೆ. ಇಲ್ಲಿ ಪರಮೇಶ್ವರನ ಜೊತೆ ಗಣೇಶ, ಪಾರ್ವತಿ, ಅಯ್ಯಪ್ಪ ಸ್ವಾಮಿ, ನಾಗ ದೇವತೆ ಹಾಗೂ ಪರಿವಾರ ದೇವತೆಯನ್ನು ಪ್ರತಿಷ್ಠಾಪಿಸಲಾಗಿದೆ. ಅತ್ಯಂತ ಶಕ್ತಿಶಾಲಿ ಆಗಿರುವ ಈ ಕುಂದೇಶ್ವರ ಎದುರಿನಲ್ಲಿ ನಿಂತು ಭಕ್ತಿಯಿಂದ ಪ್ರಾರ್ಥಿಸಿದರೆ ಮನದ ಕೋರಿಕೆಗಳು ಎಲ್ಲವೂ ಸಿದ್ಧಿ ಆಗುತ್ತೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ದೇವನಿಗೆ ಸೋಣೆ ಆರತಿ ಮಾಡುವುದರಿಂದ ಹರಕೆ ಹೊತ್ತರೆ ವಿಶೇಷ ಫಲಗಳು ದೊರೆಯುತ್ತವೆ ಎನ್ನುವುದು ಇಲ್ಲಿಗೆ ಬರುವ ಭಕ್ತಾದಿಗಳ ಮನದ ಮಾತಾಗಿದೆ. ಇನ್ನೂ ದೇಗುಲದ ಹೊರ ಆವರಣದಲ್ಲಿ ಇರುವ ಪುಷ್ಕರಣಿಯಲ್ಲಿ ಋಷಿಕೇಶ ಶಿವನ ಧ್ಯಾನಸ್ಥ ಶಿವನ ಗಂಗಾವತರಣ ದ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಲಾಗಿದ್ದು, ಇದು ನೋಡುಗರ ಮನದಲ್ಲಿ ರೋಮಾಂಚನವನ್ನು ಉಂಟು ಮಾಡುತ್ತದೆ. ಪರಮೇಶ್ವರನು ನೆಲೆಸಿರುವ ಈ ಪುಣ್ಯ ಕ್ಷೇತ್ರದಲ್ಲಿ ಕಾರ್ತಿಕ ಬಹುಳ ಅಮಾವಸ್ಯೆಯ ದಿನ ದೇವರಿಗೆ ಲಕ್ಷ ದೀಪೋತ್ಸವ ಸೇವೆಯನ್ನು ಮಾಡಲಾಗುತ್ತದೆ. ಈ ದಿನ ದೇವರಿಗೆ ಶತ ರುದ್ರಾಭಿಷೇಕ, ಮಹಾ ಪೂಜೆ, ಮಂಗಳಾರತಿಯನ್ನು ನೆರವೇರಿಸಲಾಗುತ್ತದೆ.
ಇದರ ಜೊತೆಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ. ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಸಿಂಹ ಸಂಕ್ರಮಣ ದಿಂದ ಕನ್ಯಾ ಸಂಕ್ರಮಣದ ವರೆಗೆ ಇಲ್ಲಿ ಸೋಣೆ ಸಂಕ್ರಮಣವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸೋಣೆ ಆರತಿ ಮಾಡುತ್ತೇವೆ ಅಂತ ಹರಕೆ ಹೊತ್ತ ಭಕ್ತರು ಇಲ್ಲಿಗೆ ಆಗಮಿಸಿ ದೇವರಿಗೆ ಸೋಣೆ ಆರತಿ ಮಾಡುವ ಮೂಲಕ ಹರಕೆ ಪೂರ್ಣ ಮಾಡ್ತಾರೆ. ಶಿವನ ಸನ್ನಿಧಾನ ಆಗಿದ್ದರಿಂದ ಈ ಕ್ಷೇತ್ರದಲ್ಲಿ ಮಹಾ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ಸರ್ವಲಂಕೃತಾ ಭೋಶಿತನಾದ ದೇವನನ್ನು ನೋಡೋದೇ ಬದುಕಿನ ಒಂದು ಸುಕೃತ ಆಗಿದೆ. ಇಲ್ಲಿ ನೆಲೆಸಿರುವ ಪರಮಾತ್ಮನನ್ನು ನಿತ್ಯ ಬೆಳಿಗ್ಗೆ 6 ಗಂಟೆ ಯಿಂದ ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಶತ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸೋನೆ ಆರತಿ, ಶಾಶ್ವತ ನಿತ್ಯ ಪೂಜೆ, ನಂದಾ ದೀಪ ಸೇವೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಕುಂದೇಶ್ವರ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಉಡುಪಿ ಜಿಲ್ಲೆಯ ಕುಂದಾಪುರ ದಲ್ಲಿದೇ. ಈ ಕ್ಷೇತ್ರ ರಾಜಧಾನಿ ಬೆಂಗಳೂರಿನಿಂದ 408 ಕಿಮೀ, ಮಂಗಳೂರಿನಿಂದ 91 ಕಿಮೀ, ಉಡುಪಿಯಿಂದ 37 ಕಿಮೀ, ಕುಂದಾಪುರದಿಂದ 1.6 ದೂರದಲ್ಲಿದೆ. ಸಾಧ್ಯವಾದರೆ ನೀವು ಒಮ್ಮೆ ಈ ದೇವನ ಸನ್ನಿಧಾನಕ್ಕೆ ಬಂದು ಆತನ ಅನುಗ್ರಹ ಪಡೆಯಿರಿ. ಶುಭದಿನ.