ನಮಸ್ತೆ ಪ್ರಿಯ ಓದುಗರೇ, ದುಷ್ಟನಾದ ಮಹಿಷಾಸುರನನ್ನು ಸಂಹರಿಸಿ ಜಗನ್ಮಾತೆಯು ಮೈಸೂರಿನಲ್ಲಿ ಚಾಮುಂಡೇಶ್ವರಿ ಆಗಿ ನೆಲೆಸಿದರೆ, ಆಕೆಯ ಸಹೋದರಿ ಆದ ಈ ತಾಯಿಯು ಬೆಟ್ಟ ಗುಡ್ಡಗಳಿಂದ ಕೂಡಿದ ಸುಂದರವಾದ ಈ ಬೆಟ್ಟದ ಮೇಲೆ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾಳೆ. ಬನ್ನಿ ಇವತ್ತಿನ ಲೇಖನದಲ್ಲಿ ಚಾಮುಂಡೇಶ್ವರಿಯ ಸಹೋದರಿ ಆದ ಚಿಕ್ಕದೇವಮ್ಮ ದೇವಿಯ ದರ್ಶನ ಮಾಡಿ ಕೃತಾರ್ಥರಾಗೋಣ. ಚಾಮುಂಡೇಶ್ವರಿಯ ಏಳು ಸಹೋದರಿಯರಲ್ಲಿ ಒಬ್ಬಳಾದ ಚಿಕ್ಕದೇವಮ್ಮ ದೇವಿಯು ಪುರದಕಟ್ಟೆಯ ರುದ್ರ ರಮಣೀಯ ಗುಡ್ಡದ ಮೇಲೆ ನೆಲೆ ನಿಂತಿದ್ದು, ಚಿಕ್ಕಮ್ಮ, ಚಿಕ್ಕದೇವಮ್ಮ ಎಂಬೆಲ್ಲಾ ಹೆಸರಿನಿಂದ ಕರೆಯೂ ದೇವಿಯ ಈ ಆಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸ ಇದೆ ಎಂದು ಹೇಳಲಾಗುತ್ತದೆ. ದೇವಿಯ ಮೂಲ ದೇಗುಲವನ್ನು ಪುನ್ನಾಟದ ಮೂಲ ದೊರೆಗಳ ಕಾಲದಲ್ಲಿ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಮುಂದೆ ಚೋಳರು, ಮೈಸೂರಿನ ಒಡೆಯರು ದೇವಿಯ ದೇಗುಲವನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಿದರು ಎಂದು ಹೇಳಲಾಗುತ್ತದೆ. ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಿರುವ ಈ ದೇಗುಲವನ್ನು 2011 ರಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸಲೂ ಚಿಕ್ಕದೇವಮ್ಮ ದೇವಿಯು ಈ ಬೆಟ್ಟದ ಮೇಲೆ ನೆಲೆ ನಿಂತಿದ್ದು ಈ ದೇವಿಯನ್ನು ದರ್ಶನ ಮಾಡಿ ಭಕ್ತಿಯಿಂದ ಪ್ರಾರ್ಥಿಸಿದರೆ ಅಮ್ಮನವರು ಭಕ್ತರ ಸಕಲ ಇಷ್ಟಾರ್ಥಗಳನ್ನು ಸಿದ್ಧಿ ಆಗುವಂತೆ ಅನುಗ್ರಹಿಸುತ್ತಾನೆ ಎನ್ನುವುದು ಈ ದೇವಿಯನ್ನು ನಂಬಿರುವ ಭಕ್ತರ ಮನದ ಮಾತಾಗಿದೆ.
ಇನ್ನೂ ಮಂಗಳವಾರ ಶುಕ್ರವಾರ ಅಮಾವಾಸ್ಯೆ ದಿನ ಇಲ್ಲಿಗೆ ಬಂದು ದೇವಿಯಲ್ಲಿ ಹರಸಿಕೊಳ್ಳುವುದರಿಂದ ವಿಶೇಷ ಫಲಗಳು ಪ್ರಾಪ್ತಿ ಆಗುತ್ತೆ ಎನ್ನಲಾಗುತ್ತದೆ. ಹೀಗಾಗಿಯೇ ಬೇರೆ ದಿನಗಳಿಗಿಂತ ಮಂಗಳವಾರ ಶುಕ್ರವಾರ ಹಾಗೂ ಅಮಾವಾಸ್ಯೆ ದಿನಗಳಂದು ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತದೆ. ಇನ್ನೂ ಹಲವಾರು ಹಿರಿಯರ ಹೇಳಿಕೆಯ ಪ್ರಕಾರ ಚಿಕ್ಕದೇವಮ್ಮ ಬೆಟ್ಟಕ್ಕು ಮೈಸೂರಿನ ಚಾಮುಂಡಿ ದೇವಿಯ ಬೆಟ್ಟಕ್ಕೆ ತಲುಪಲು ಒಂದು ಸುರಂಗ ಮಾರ್ಗ ಇದೆಯಂತೆ. ಈಗಲೂ ಆ ಸುರಂಗ ಮಾರ್ಗ ಇದ್ದು, ಅಲ್ಲಿ ಒಂದು ಸರ್ಪ ಕಾವಲು ಕಾಯ್ತಾ ಇದೆ ಎನ್ನುವ ಕಾರಣದಿಂದ ಸುರಂಗ ಮಾರ್ಗದ ಬಳಿ ತೆರಳಲು ಜನರು ಹೆದರುತ್ತಾ ಇದ್ದಾರೆ. ಈ ಕಾರಣದಿಂದ ಸುರಂಗ ಮಾರ್ಗ ಗಿಡ ಗಂಟಿಗಳಿಂದ ಮುಚ್ಚಿ ಹೋಗಿದೆ ಎಂದು ಹೇಳಲಾಗುತ್ತದೆ. ಚಾಮುಂಡೇಶ್ವರಿಯನ್ನು ಹೇಗೆ ಪೂಜಿಸುತ್ತಾರೆ ಹಾಗೆಯೇ ಹಿಂದೆ ಯದು ವಂಶದ ಮಹಾರಾಜರು ಈ ದೇವಿಯನ್ನು ಸಕುಟುಂಬ ಸಪರಿವಾರ ಸಮೇತರಾಗಿ ಪೂಜಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅಲ್ಲದೆ ದೇವಿಯ ತೆಪ್ಪೋತ್ಸವ ನಡೆಸುವ ಜಾಗವನ್ನು ಹಾಲ್ಗಡ ಎಂದು ಹೇಳಲಾಗುತ್ತದೆ. ಬೆಟ್ಟದ ಮುಂದಿರುವ ಕಪಿಲ ನದಿಯಲ್ಲಿ ನದಿಯ ನೀರು ಹಾಲಿನ ನೊರೆಯ ಹಾಗೆ ಹರಿಯುತ್ತದೆ ಹೀಗಾಗಿಯೇ ಬೆಟ್ಟದ ಮುಂದೆ ನಿರ್ಮಲವಾಗಿಯು ಶಾಂತವಾಗಿ ಹರಿಯುವ ಕಪಿಲ ನದಿಯ ಹರಿವಿನ ಜಾಗವನ್ನು ಹಾಲ್ಗಡ ಎಂದು ಕರೆಯಲಾಗುತ್ತದೆ. ಜಾನಪದ ಕಥೆಯ ಪ್ರಕಾರ ಹಿಟ್ನಾಲದ ಮಹಿಳೆಯೊಬ್ಬಳು ಪ್ರತಿದಿನ ದೇವಿಗೆ ಹಾಲನ್ನು ಸಮರ್ಪಿಸಿ ಬರುತ್ತಾ ಇದ್ದಳು.
ಒಂದು ದಿನ ನದಿಯನ್ನು ದಾಟಿ ಬರುವಾಗ ಅವಳು ಆಯತಪ್ಪಿ ನದಿಗೆ ಬೀಳುತ್ತಾಳೆ. ಆಗ ಅವಳ ಕೈಯಲ್ಲಿದ್ದ ಹಾಲು ನದಿಗೆ ಚಲ್ಲಿ ಹೋಗುತ್ತೆ, ನಂತರ ಮಹಿಳೆಯು ದೇವಿಯನ್ನು ಪ್ರಾರ್ಥಿಸಿ ನದಿಯ ನೀರನ್ನು ಹಾಲೆಂದು ಭಾವಿಸಿ ನೀರನ್ನೇ ಭಕ್ತಿಯಿಂದ ದೇವಿಗೆ ಅರ್ಪಿಸುತ್ತಾರೆ. ಅವಳ ಭಕ್ತಿಗೆ ಮೆಚ್ಚಿದ ದೇವಿ ನೀರನ್ನೇ ಹಾಲಾಗಿ ಸ್ವೀಕರಿಸುತ್ತಾರೆ. ಹೀಗಾಗಿಯೇ ನದಿಯು ಹರಿಯುವ ಸ್ಥಳಕ್ಕೆ ಹಾಲ್ಗಡ ಎಂದು ಹೇಳಲಾಗುತ್ತದೆ ಎಂದು ಮಾತುಗಳು ಇಲ್ಲಿ ಕೇಳಿ ಬರುತ್ತವೆ. ಪ್ರತಿ ವರ್ಷವೂ ಯುಗಾದಿ ಹಬ್ಬದ ಹೊತ್ತಿನಲ್ಲಿ ದೇವಿಯ ಜಾತ್ರಾ ಮಹೋತ್ಸವ ವನ್ನಾ ನಡೆಸಲಾಗುತ್ತದೆ. ಈ ಸಮಯದಲ್ಲಿ ಉತ್ಸವ ಮೂರ್ತಿಯನ್ನು ಹಾಲ್ಗಡಕ್ಕೆ ತೆಗೆದುಕೊಂಡು ಹೋಗಿ, ಪೂಜೆ ಸಲ್ಲಿಸಿ ಹಿತ್ನಾಲದ ಭಕ್ತರ ಮನೆಯಲ್ಲಿ ಎರಡು ದಿನ ದೇವಿಯ ಉತ್ಸವ ಮೂರ್ತಿಯನ್ನು ಇಟ್ಟು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಯನ್ನು ನಡೆಸಲಾಗುತ್ತದೆ. ನವರಾತ್ರಿ ಹಾಗೂ ಧನುರ್ಮಾಸದ ಹುಣ್ಣಿಮೆಯಲ್ಲಿ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಎಲೆಮರೆಯ ಕಾಯಿಯಂತೆ ಇದ್ದು, ಭಕ್ತರ ಸರ್ವ ಸಂಕಷ್ಟಗಳನ್ನು ನೀಗಿಸುತ್ತಿರುವ ಚಿಕ್ಕಮ್ಮ ದೇವಿಯನ್ನು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಉಡಿ ಸೇವೆ, ಕುಂಕುಮಾರ್ಚನೆ, ಮಂಗಳಾರತಿ, ಆಭರಣ ಸಮರ್ಪಣೆ ಇನ್ನೂ ಮುಂತಾದ ಸೇವೆಗಳನ್ನು ಮಾಡಿಸಬಹುದು. ಚಿಕ್ಕಮ್ಮದೇವಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಪುರದ ಕಟ್ಟೆ ಬಳಿ ಇದೆ. ಈ ಕ್ಷೇತ್ರವು ಬೆಂಗಳೂರಿನಿಂದ 196 ಕಿಮೀ, ಮೈಸೂರಿನಿಂದ 64 ಕಿಮೀ, ಹೆಚ್.ಡಿ ಕೋಟೆಯಿಂದ 29 ಕಿಮೀ, ಸರಗೂರಿನಿಂದ 15 ಕಿಮೀ, ದೂರದಲ್ಲಿದೆ. ಸಾಧ್ಯವಾದರೆ ಜೀವಮಾನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ದೇವಿಯ ಕೃಪೆಗೆ ಪಾತ್ರರಾಗಿ. ಶುಭದಿನ.